ಜೀವನದಲ್ಲಿ ನಮಗೆ ಕಂಫರ್ಟ್ ಜೋನ್ ಅಂತ ಏನಿರತ್ತೆ, ಎಲ್ಲಿ ನಾವು ಆರಾಮಾಗಿ ಇರ್ತೀವೋ ಅಲ್ಲೇ ನಾವು ಯಾವಾಗ್ಲೂ ಇದ್ದು ಬಿಡ್ತೀವಿ. ಅದನ್ನ ದಾಟಿ ನಾವು ಪ್ರಪಂಚ ಹೇಗೆ ಏನು ಅನ್ನೋದನ್ನ ನೋಡದೇ ಇಲ್ಲ. ನಮ್ಮಲ್ಲಿ ಅನೇಕ ಜನರು ತಮ್ಮದೇ ಆದ ಕಂಫರ್ಟ್ ಝೋನ್ನಲ್ಲೇ ಬದುಕೋದಕ್ಕೆ ಇಷ್ಟಪಡ್ತೀವಿ. ಅದು ಆಫೀಸಿನ ಕೆಲಸನೇ ಆಗಿರ್ಬಹುದು, ಅಥವಾ ಮನೆಯೊಳಗೇ ಇರೋದಾಗಲಿ, ಅಲ್ಲದೇ ನಮ್ಮ ಸುತ್ತಲಿನ ಜನರ ಜೊತೆ ಬೆರೆಯುವುದಾಗಲಿ. ಒಟ್ಟಾರೆ ಇದ್ರಲ್ಲೆ ನಾವು ಆರಾಮಾಗಿ ಇರ್ತಿವಿ. ಅದರ ಹೊರತಾಗಿ ಹೊಸದೇನನ್ನೋ ಪ್ರಯತ್ನಿಸೋದಕ್ಕೆ ಭಯ ಪಡ್ತೀವಿ. ಹೊಸ ಕೆಲಸ ಹೇಗಿರುತ್ತದೋ? ಮನೆಯಿಂದ ಹೊರಹೋದರೆ ಅಲ್ಲಿನ ಪರಿಸ್ಥಿತಿಯನ್ನ ನಿಭಾಯಿಸಕ್ಕಾಗತ್ತೋ? ಇಲ್ವೋ? ನಮ್ಮನ್ನ ಯಾರು ಏನ್ ಅನ್ಕೊಳ್ತಾರೋ ಏನೋ? ಅಂತೆಲ್ಲಾ ಭಾವಿಸಿಕೊಂಡು ಕಂಫರ್ಟ್ ಝೋನ್ನಿಂದ ಹೊರಬರೋದಕ್ಕೆ ಹೆದರ್ತಾರೆ. ಜೀವನದಲ್ಲಿ ಕೆಲವು ರೂಢಿಗಳನ್ನು ಎಷ್ಟು ಬೇಗ, ಎಷ್ಟು ಸುಲಭವಾಗಿ ಅಳವಡಿಸಿಕೊಳ್ತೇವೆ ಅಂದ್ರೆ ಅದನ್ನ ಬಿಡೋದಕ್ಕೆ ಕಷ್ಟವಾಗೋವಷ್ಟು. ಆದರೆ ನಮ್ಮ ಜೀವನದಲ್ಲಿ ಕಂಫರ್ಟ್ ಝೋನ್ನಿಂದ ಹೊರಬರುವುದು ತುಂಬಾ ಮುಖ್ಯ. ಆಗಲೇ ನಮಗೆ ಜಗತ್ತು ನಮಗೆ ವಿಶಾಲವಾಗಿ ಕಾಣತ್ತೆ. ಆಗಲೇ ನಮ್ಮ ಸಾಮರ್ಥ್ಯದ ಅರಿವು ನಮಗಾಗೋದು. ಹೊಸದಾಗಿ ಆತ್ಮವಿಶ್ವಾಸ ಮೂಡತ್ತೆ. ಹಾಗೆ ನೀವು ಕಂಫರ್ಟ್ ಝೋನ್ನಿಂದ ಹೊರಗೆ ಹೇಗೆ ಹೆಜ್ಜೆ ಹಾಕಬೇಕೆಂದು ತಿಳಿಯೋದಕ್ಕೆ ನಮ್ಮ ಇಚ್ಛಾಶಕ್ತಿ ಮತ್ತು ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯ.
ಕಂಫರ್ಟ್ ಝೋನ್ನಲ್ಲಿ ಜೀವನವನ್ನು ನಡೆಸುವುದು ಸುರಕ್ಷಿತ, ಆರಾಮದಾಯಕವಾಗಿರುತ್ತದೆ. ಅಲ್ಲದೇ ಅದ್ರಲ್ಲಿ ಯಾವುದೇ ರೀತಿಯ ಸ್ಟ್ರೆಸ್ ಇರೋದಿಲ್ಲ. ಆದರೆ ನಾವು ಬಾವಿಯೊಳಗಿನ ಕಪ್ಪೆಯಾಗಿರ್ತೇವೆ. ಆದರೆ ಅದೇ ಕಂಫರ್ಟ್ ಝೋನ್ನ್ನ ಬಿಟ್ಟು ಹೊರ ಬಂದಾಗ ನಾವು ಸಕ್ಸೆಸ್ಗೆ ಒಂದು ಹೆಜ್ಜೆ ಹತ್ತಿರವಾಗಿರ್ತೇವೆ. ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭೂಯಾತ್'- ಅಂದರೆ ಗೀತಾಸಾರದ ಸ್ವಲ್ಪ ಅನುಷ್ಠಾನ ಕೂಡ ಮನುಷ್ಯನನ್ನು ಹೆಚ್ಚು ಶ್ರೀಮಂತನೂ, ಸುಂದರನೂ ಹಾಗೂ ಭಯರಹಿತನೂ ಆಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ಹೇಗೆ ಕೂಪದಲ್ಲಿರುವ ಮಂಡೂಕ ತನಗೆಟಕಿದಷ್ಟನ್ನು ಪಡೆದು ಮುನ್ನಡೆಯುತ್ತದೆಯೋ ಮತ್ತು ಅಷ್ಟರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತದೆಯೋ ಅದೇ ರೀತಿ ನಮ್ಮ ಜ್ಞಾನಚಕ್ಷುಗಳಿಗೆಟಕುವಂತಹ ಕೆಲವೇ ಉತ್ತಮ ವಿಚಾರಗಳನ್ನು ಅರಿತು, ಪರಾಮರ್ಶಿಸಿಕೊಂಡು, ಅಳವಡಿಸಿಕೊಂಡು ನಂತರ ನಿರಂತರ ಸಾಧನೆಗೈಯುವುದು ದ್ವಂದ್ವರಹಿತ ಬಾಳ್ವೆಗೆ ಶ್ರೀ ಕೃಷ್ಣ ಹೇಳಿದಂತೆ ನಾಂದಿಯಾಗಬಲ್ಲದು.
ನಿಮ್ಮ ಆರಾಮ ವಲಯದಿಂದ ಹೊರಗೆ ಹೇಗೆ ಹೆಜ್ಜೆ ಹಾಕಬೇಕೆಂದು ಕಲಿಯುವ ಮೂಲಕ ನಾವು ಒಳ್ಳೆಯ ಜೀವನವನ್ನು ನಡೆಸಬಹುದು. ಒಮ್ಮೆ ನೀವು ನಿಮ್ಮ ಆರಾಮ ವಲಯದಿಂದ ಹೊರಬಂದು ರಿಸ್ಕ್ ತೆಗೆದುಕೊಳ್ಳಲು ಶುರು ಮಾಡಿದರೆ, ನೀವು ಹೊಸದೇನನ್ನೋ ಸಾಧಿಸಬಹುದು. ಆಗ ನೀವು ಹೊಸ ಬದುಕನ್ನು ಶುರು ಮಾಡಬಹುದು. ನಿಮಗೇ ಗೊತ್ತಿಲ್ಲದ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಳ್ಲಬಹುದು. ಆದ್ದರಿಂದ ನಾವು ಕಂಫರ್ಟ್ ಝೋನ್ನಿಂದ ಹೊರಬರೋದಕ್ಕೆ ಟ್ರೈ ಮಾಡ್ಬೇಕು. ಜನರು ಇದ್ದಂತೆಯೇ ಇರಲು ಬಯಸುತ್ತಾರೆ. ಏಕೆಂದರೆ ಅವರಿಗೆ ಅದು ಅನುಕೂಲಕರ ಮತ್ತು ಸುರಕ್ಷಿತವಾಗಿರುತ್ತದೆ. ಆದಾಗ್ಯೂ, ನೀವು ಕಂಫರ್ಟ್ ಝೋನ್ನಲ್ಲಿಯೇ ಇದ್ದರೆ ಇದ್ದ ಹಾಗೇ ಇರುತ್ತೀರೇ ಹೊರತು ಅಭಿವೃದ್ಧಿಯಾಗುವುದಿಲ್ಲ. ಅವಕಾಶಗಳನ್ನು ಪಡೆದುಕೊಳ್ಳದೇ… ಹೊಸದನ್ನು ಪ್ರಯತ್ನಿಸದೇ ಇರುವುದರಿಂದ ನಿಮ್ಮ ಬದುಕು ನೀರಸವಾಗುವ ಸಾಧ್ಯತೆಗಳಿರುತ್ತವೆ. ಕೂಪ ಮಂಡೂಕವು ನಮಗೆ ಆದರ್ಶಪ್ರಾಯವಾಗಬೇಕಷ್ಟೆ ಅಂತ ಹೇಳ್ತಿನಿ ಇವತ್ತಿನ ಸಂಚಿಕೆಗೆ ಪೂರ್ಣವಿರಾಮವನ್ನಿಡ್ತಾ ಇದೀನಿ.




